ಬೆಂಗಳೂರು: ನಡು ರಸ್ತೆಯಲ್ಲಿ ಭೀಕರ ಹತ್ಯೆ – ರೌಡಿಶೀಟರ್ ಪುನೀತ್ನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು
ಬೆಂಗಳೂರು ನಗರ ಹೊರವಲಯದ ಕಾಡುಗೋಡಿಯಲ್ಲೊಂದು ಭೀಕರ ಹತ್ಯೆ ನಡೆದಿದೆ. ನಡು ರಸ್ತೆಯಲ್ಲೇ ಸಾರ್ವಜನಿಕರ ಎದುರೇ ಕಚ್ಚಾಡು ಶೈಲಿಯಲ್ಲಿ ರೌಡಿಶೀಟರ್ರನ್ನು ದುಷ್ಕರ್ಮಿಗಳು ಮಚ್ಚುಗಳಿಂದ ಮನಸೋ ಇಚ್ಛೆ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆ ಮಂಗಳವಾರ ರಾತ್ರಿ ಕಾಡುಗೋಡಿ ಪ್ರದೇಶದ ವಿಜಯಲಕ್ಷ್ಮಿ ಲೇಔಟ್ನಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಪುನೀತ್ @ ನೇಪಾಳಿ ಪುನೀತ್ ಎಂದು ಗುರುತಿಸಲಾಗಿದೆ. ಆತ ಕಾಡುಗೋಡಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ. ಪುನೀತ್ ಹಾಗೂ ಇನ್ನೊಬ್ಬ ರೌಡಿಶೀಟರ್ ಶ್ರೀಕಾಂತ್ ನಡುವೆ ಹಿಂದಿನಿಂದಲೇ ವೈಷಮ್ಯವಿತ್ತು. ಈ ಇಬ್ಬರ ನಡುವೆ ಬಹುಮಾರಿಗೆ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆಗಳು ಸಂಭವಿಸುತ್ತಿದ್ದವು. ಇತ್ತೀಚೆಗೆ ಪುನೀತ್, ಶ್ರೀಕಾಂತ್ನ್ನು ಕೊಲೆ ಮಾಡುವುದಾಗಿ ಸಾರ್ವಜನಿಕವಾಗಿ ಹೇಳಿಕೊಂಡು ಓಡಾಡುತ್ತಿದ್ದನೆಂಬ ಮಾಹಿತಿ ಲಭಿಸಿದೆ. ಇದರಿಂದ ಕೋಪಗೊಂಡಿದ್ದ ಶ್ರೀಕಾಂತ್ ಮನಸ್ಸಿನಲ್ಲಿ ದ್ವೇಷ ಹೊಂದಿದ್ದ.
ಮಂಗಳವಾರ ರಾತ್ರಿ, ಪುನೀತ್ ಕಾಡುಗೋಡಿಯ ವಿಜಯಲಕ್ಷ್ಮಿ ಲೇಔಟ್ ಬಳಿ ಇರುವಾಗ, ಬೈಕ್ನಲ್ಲಿ ಆಗಮಿಸಿದ ನಾಲ್ವರು ದುಷ್ಕರ್ಮಿಗಳು ಅವನ ಮೇಲೆ ದಾಳಿ ನಡೆಸಿದರು. ಮಚ್ಚುಗಳು ಹಾಗೂ ಇತರ ತೀಕ್ಷ್ಣಾಸ್ತ್ರಗಳಿಂದ ಪುನೀತ್ನನ್ನು ಅನೇಕ ಬಾರಿ ಕೊಚ್ಚಿ, ಭೀಕರವಾಗಿ ಕೊಲೆ ಮಾಡಿದರು. ಕೊಲೆ ನಂತರ ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಕುರಿತು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಹಿಂದೆ ಶ್ರೀಕಾಂತ್ ಹಾಗೂ ಅವನ ತಂಡವಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಈಗ ಆರೋಪಿ ಶ್ರೀಕಾಂತ್ ಹಾಗೂ ಇತರರನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಬಿಗುಭದ್ರತೆ ಜಾರಿಗೊಳಿಸಲಾಗಿದೆ ಮತ್ತು ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.