ನೆಲಮಂಗಲದ ನರಸಿಂಹನಪಾಳ್ಯದಲ್ಲಿ ನಿಯಮ ಮೀರಿ 15-20 ಅಡಿ ಆಳಕ್ಕೆ ಕೆರೆ ಬಗೆದ ಆರೋಪ; ಕ್ಯಾಮೆರಾ ಕಂಡ ತಕ್ಷಣ ಲಾರಿಗಳ ಪರಾರಿ, ಸಮಗ್ರ ತನಿಖೆಗೆ ಗ್ರಾಮಸ್ಥರ ಒತ್ತಾಯ.
ನೆಲಮಂಗಲ: ತಾಲೂಕಿನ ನರಸಿಂಹನಪಾಳ್ಯ ಗ್ರಾಮದಲ್ಲಿ ಕೆರೆಯ ಹೂಳು ತೆಗೆಯುವ ಹೆಸರಿನಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಿಯಮಾನುಸಾರ ಕೆರೆಯಲ್ಲಿ ಎರಡುರಿಂದ ಮೂರು ಅಡಿ ಆಳದವರೆಗೆ ಮಾತ್ರ ಹೂಳು ತೆಗೆಯಲು ಅವಕಾಶವಿದ್ದರೂ, ಸುಮಾರು 15 ರಿಂದ 20 ಅಡಿ ಆಳದವರೆಗೆ ಬಗೆದು ಸಾವಿರಾರು ಲೋಡ್ಗಳಷ್ಟು ಮಣ್ಣನ್ನು ಸಾಗಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಅಕ್ರಮದಲ್ಲಿ ಬೂದಿಹಾಳ ಗ್ರಾಮ ಪಂಚಾಯಿತಿಯ ಅಮಾನತುಗೊಂಡಿರುವ ಪಿಡಿಒ ಚಿರಂಜೀವಿ ಅವರ ಕೈವಾಡವಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಗ್ರಾಮಾಭಿವೃದ್ಧಿ ಕಾಮಗಾರಿಯ ಹೆಸರಿನಲ್ಲಿ ಅನುಮತಿ ಪಡೆದು, ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕ ಆಸ್ತಿಯಾಗಿರುವ ಕೆರೆಯ ಮಣ್ಣನ್ನು ಖಾಸಗಿ ಉದ್ದೇಶಗಳಿಗೆ ಬಳಸುವಂತೆ ಸಾಗಿಸಲಾಗಿದೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಮತ್ತೊಂದು ಪ್ರಕರಣದಲ್ಲಿ ಅಮಾನತಾಗಿದ್ದ ಪಿಡಿಒ ಅವರ ಹೆಸರು ಇದೀಗ ಮತ್ತೆ ಮಣ್ಣು ದರೋಡೆ ಪ್ರಕರಣದಲ್ಲಿ ಕೇಳಿಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸ್ಥಳೀಯರ ಪ್ರಕಾರ, ಜೆಸಿಬಿ, ಹಿಟಾಚಿ ಯಂತ್ರಗಳು ಹಾಗೂ ಬೃಹತ್ ಲಾರಿಗಳ ಮೂಲಕ ಹಗಲು-ರಾತ್ರಿ ಎನ್ನದೆ ಮಣ್ಣು ಅಗೆದು ಸಾಗಿಸಲಾಗುತ್ತಿದೆ. ಈ ಮಣ್ಣನ್ನು ಗೋದಾಮು ನಿರ್ಮಾಣ, ಇಟ್ಟಿಗೆ ತಯಾರಿಕೆ ಸೇರಿದಂತೆ ವಿವಿಧ ಖಾಸಗಿ ಕಾಮಗಾರಿಗಳಿಗೆ ಬಳಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಹಲವು ದಿನಗಳಿಂದ ಈ ಚಟುವಟಿಕೆ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ ಮಣ್ಣು ತುಂಬಿದ್ದ ಲಾರಿಗಳು ಸ್ಥಳದಿಂದ ತೆರಳಲು ಯತ್ನಿಸಿದ ಘಟನೆ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. “ನಿಯಮಾನುಸಾರವೇ ಹೂಳು ತೆಗೆಯುತ್ತಿದ್ದರೆ ಕ್ಯಾಮೆರಾ ಕಂಡ ತಕ್ಷಣ ಲಾರಿಗಳು ಯಾಕೆ ಪರಾರಿಯಾದವು?” ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಕೆಲವರು ಸ್ಥಳದಲ್ಲಿದ್ದ ಯಂತ್ರಗಳನ್ನು ತಕ್ಷಣ ನಿಲ್ಲಿಸಿ ಸ್ಥಳ ತೊರೆದಿರುವುದನ್ನೂ ಗ್ರಾಮಸ್ಥರು ಉಲ್ಲೇಖಿಸಿದ್ದಾರೆ.
ಈ ಪ್ರಕರಣದಲ್ಲಿ ಕೆಲ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೌನ ಸಹಕಾರವೂ ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೆರೆಯ ಸ್ವರೂಪ ಬದಲಾಗುವಷ್ಟು ಪ್ರಮಾಣದಲ್ಲಿ ಮಣ್ಣು ತೆಗೆಯಲಾಗಿದ್ದರೂ, ಸಂಬಂಧಪಟ್ಟ ಇಲಾಖೆ ಪರಿಶೀಲನೆ ನಡೆಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೆರೆಯ ಸಂರಕ್ಷಣೆಗಿಂತ ಅಕ್ರಮ ಮಣ್ಣು ಸಾಗಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ಘಟನೆ ಕುರಿತು ಸಮಗ್ರ ತನಿಖೆ ನಡೆಸಿ, ಕೆರೆಯ ಮಣ್ಣು ಅಕ್ರಮವಾಗಿ ಸಾಗಿಸಲಾಗಿದೆಯೇ, ಯಾರ ಅನುಮತಿ ನೀಡಲಾಗಿದೆ ಹಾಗೂ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ
