ಮದುವೆಯ ಒತ್ತಾಯ ಮಾಡಿದ ಮಹಿಳೆಯನ್ನು ಎಂಟು ಬಾರಿ ಇರಿದು ಹತ್ಯೆಗೈದ ಪ್ರೇಮಿ

ಮದುವೆಯ ಒತ್ತಾಯ ಮಾಡಿದ ಮಹಿಳೆಯನ್ನು ಎಂಟು ಬಾರಿ ಇರಿದು ಹತ್ಯೆಗೈದ ಪ್ರೇಮಿ

ಬೆಂಗಳೂರು, ನವೆಂಬರ್ 02: ಪ್ರೀತಿಯ ಹೆಸರಿನಲ್ಲಿ ನಡೆದ ನುಂಗಲಾಗದ ದಾರುಣ ಘಟನೆ ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮದುವೆಯಾಗು ಎಂಬ ಒತ್ತಾಯಕ್ಕೆ ಕೋಪಗೊಂಡ ಯುವಕ ಮಹಿಳೆಯನ್ನು ಎಂಟು ಬಾರಿ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಈ ಘಟನೆ ಅಕ್ಟೋಬರ್ 31ರ ರಾತ್ರಿ 9.30ರ ಸುಮಾರಿಗೆ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಮೃತ ಮಹಿಳೆಯನ್ನು ರೇಣುಕಾ ಎಂದು ಗುರುತಿಸಲಾಗಿದ್ದು, ಆರೋಪಿ ಅಂಬೇಡ್ಕರ್ ಅಲಿಯಾಸ್ ಕುಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಯು ಪ್ರೇಮ ಸಂಬಂಧದ ವಿಚಾರದಲ್ಲೇ ಹತ್ಯೆ ಎಸಗಿರುವುದು ಸ್ಪಷ್ಟವಾಗಿದೆ.

ಘಟನೆಯ ಹಿನ್ನೆಲೆ
ರೇಣುಕಾಗೆ ಇತ್ತೀಚಿನ ದಿನಗಳಲ್ಲಿ ಪತಿಯಿಂದ ಅಂತರ ಉಂಟಾಗಿ, ಆಕೆ ಒಬ್ಬಳೇ ಒಂದು ಮಗುವಿನೊಂದಿಗೆ ಬದುಕು ಸಾಗಿಸುತ್ತಿದ್ದರು. ಇದೇ ವೇಳೆ, ಆಕೆ ವಾಸಿಸುತ್ತಿದ್ದ ಪ್ರದೇಶದಲ್ಲಿಯೇ ಬ್ಯಾನರ್‌ ಪ್ರಿಂಟಿಂಗ್ ಕೆಲಸ ಮಾಡುತ್ತಿದ್ದ ಕುಟ್ಟಿ ಎಂಬಾತನೊಂದಿಗೆ ಪರಿಚಯ ಬೆಳೆದಿತ್ತು. ಸಮಯ ಕಳೆದಂತೆ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿದ್ದು, ರೇಣುಕಾ ಆತನಿಗೆ ಮದುವೆಯ ಒತ್ತಾಯ ಮಾಡುತ್ತಿದ್ದಾಳೆ.

ಆದರೆ ಕುಟ್ಟಿಗೆ ಈ ಸಂಬಂಧ ಮುಂದುವರಿಸಲು ಆಸಕ್ತಿ ಇರಲಿಲ್ಲ. ಅವನು ಈ ಪ್ರೀತಿಯನ್ನು ‘ಟೈಮ್‌ಪಾಸ್’ ಎಂದುಕೊಂಡಿದ್ದಾನೆ ಎನ್ನಲಾಗಿದ್ದು, ಮದುವೆಯ ವಿಚಾರ ಕೇಳಿ ಕೋಪಗೊಂಡಿದ್ದಾನೆ. ಇದೇ ಹಿನ್ನೆಲೆಯಲ್ಲಿ “ನಿನ್ನ ಜೊತೆ ಮಾತಾಡಬೇಕಿದೆ” ಎಂದು ಕರೆಸಿ, ಅಕ್ಟೋಬರ್ 31ರ ರಾತ್ರಿ ಪಿಳ್ಳಣ್ಣ ಗಾರ್ಡನ್‌ನ ಬಿಬಿಎಂಪಿ ಶಾಲೆ ಬಳಿ ಭೇಟಿಯಾಗಲು ಹೇಳಿದ್ದಾನೆ.

ಅಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಕೋಪಗೊಂಡ ಕುಟ್ಟಿ ತನ್ನ ಬಳಿ ಇಟ್ಟಿದ್ದ ಚಾಕುವಿನಿಂದ ರೇಣುಕಾಳ ಮೇಲೆ ಕ್ರಮವಾಗಿ ಎಂಟು ಬಾರಿ ಇರಿದಿದ್ದಾನೆ. ಸ್ಥಳೀಯರು ರೇಣುಕಾಳ ರಕ್ಷಣೆಗೆ ಧಾವಿಸಿ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ, ಗಂಭೀರ ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ.

ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದರೂ, ಕೆ.ಜಿ.ಹಳ್ಳಿ ಪೊಲೀಸರು ತಕ್ಷಣ ತನಿಖೆ ಆರಂಭಿಸಿ, ಪತ್ತೆ ಕಾರ್ಯಚರಣೆ ನಡೆಸಿ ಕುಟ್ಟಿಯನ್ನು ಬಂಧಿಸಿದ್ದಾರೆ. ಪ್ರಸ್ತುತ ಅವನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ವಿಚಾರಣೆ ಮುಂದುವರೆದಿದೆ.

ಈ ಘಟನೆಯು ಪ್ರೇಮ ಸಂಬಂಧದ ಅತಿರೇಕ ಹೇಗೆ ಮಾನವೀಯತೆಯ ನಾಶಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಮತ್ತೊಂದು ನಿದರ್ಶನವಾಗಿದೆ ಎಂದು ಸ್ಥಳೀಯರು ವಿಷಾದ ವ್ಯಕ್ತಪಡಿಸಿದ್ದಾರೆ.

Spread the love

Leave a Reply

Your email address will not be published. Required fields are marked *