ಕೊಪ್ಪಳ: ಜಿಲ್ಲೆಯ ಕೆಆರ್ಐಡಿಎಲ್ನಲ್ಲಿ (KRIDL) 96 ಕಾಮಗಾರಿಗಳ ಹೆಸರಿನಲ್ಲಿ ಬಹುಕೋಟಿ ಹಗರಣವಾಗಿರುವುದು ಬೆಳಕಿಗೆ ಬಂದಿದ್ದು, ಬಿಜೆಪಿ (BJP) ಮಾಜಿ ಶಾಸಕ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ರಾಜ್ಯದಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದು ವಾಲ್ಮೀಕಿ ಹಗರಣ (Valmiki Scam), ಆದರೆ ವಾಲ್ಮೀಕಿ ಹಗರಣವನ್ನೇ ಮೀರಿಸುವಂತಹ ದೊಡ್ಡ ಹಗರಣವನ್ನ `ಪಬ್ಲಿಕ್ ಟಿವಿ’ ಬಯಲಿಗೆ ಎಳೆದಿದೆ. ಕೊಪ್ಪಳದ (Koppal) ಕೆಆರ್ಐಡಿಎಲ್ನಲ್ಲಿ ಕಾಮಗಾರಿ ಮಾಡದೆ 96 ಕಾಮಗಾರಿಗಳ ಹೆಸರಲ್ಲಿ ನೂರಾರು ಕೋಟಿ ಹಗರಣ ನಡೆದಿದೆ. ಇದೀಗ ಈ ಹಗರಣದಲ್ಲಿ ನೂರಾರು ಕೋಟಿ ರೂ. ನುಂಗಿರುವ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.
ಸದ್ಯ ಈ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ತನಿಖೆ ನಡೆಸುವಂತೆ ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಸಿಎಂ ಹಾಗೂ ಕೆಆರ್ಐಡಿಎಲ್ ಎಂಡಿಗೆ ಮನವಿ ಮಾಡಿದ್ದಾರೆ. ಈ ಕಾಮಗಾರಿಗಳು ನಡೆದಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಕನಕಗಿರಿ ಶಾಸಕ ಹಾಗೂ ಇಂದು ಬಿಜೆಪಿ ಜಿಲ್ಲಾದ್ಯಕ್ಷರಾಗಿರುವ ಬಸವರಾಜ ದಡೆಸೂಗುರ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.
ಕೆಆರ್ಐಡಿಎಲ್ ವತಿಯಿಂದ ಒಟ್ಟು 96 ಕಾಮಗಾರಿಗಳನ್ನ ಮಾಡಿದ್ದು, ಕನಕಗಿರಿಯಲ್ಲಿ 19, ಗಂಗಾವತಿಯಲ್ಲಿ 05, ಯಲಬುರ್ಗಾದಲ್ಲಿ 04, ಹಾಗೂ ಕೊಪ್ಪಳದಲ್ಲಿ ಒಟ್ಟು 68 ಕಾಮಗಾರಿಗಳನ್ನ ಮಾಡಲಾಗಿದೆ. ಎಲ್ಲಾ ಕಾಮಗಾರಿಗಳ ಮೊತ್ತ ನೂರಾರು ಕೋಟಿಯಾಗಿದ್ದು, ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿ ಝಡ್ ಚಿಂಚೋಳಿಕರ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಆದರೂ ನ್ಯಾಯಾಲಯದ ಮೂಲಕ ಮತ್ತೆ ಅಧಿಕಾರದಲ್ಲಿ ಮುಂದುವರೆದಿದ್ದಾರೆ.
ಇನ್ನೂ ಈ ಕುರಿತು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ (Raghavendra Hitnal) ಮಾತನಾಡಿ, ಈ ಅಕ್ರಮದಲ್ಲಿ ಹೊರಗುತ್ತಿಗೆ ದಾರ ಕಳಕಪ್ಪ ನಿಡಗುಂದಿ ಮತ್ತು ಸಿಮೆಂಟ್ ಪೂರೈಕೆದಾರ ಅಮರೇಶ ಯಂಬಲದಿನ್ನಿ ಕೂಡ ಸಾಥ್ ನೀಡಿದ್ದಾರೆ. ಸದ್ಯ ಎಲ್ಲಾ ಕಾಮಗಾರಿಗಳ ತನಿಖೆ ನಡೆಸಿ, ಲೋಪವೆಸಗಿದ ಅಧಿಕಾರಿ ಹಾಗೂ ಇದಕ್ಕೆ ಸಾಥ್ ನೀಡಿದ ಎಲ್ಲರ ವಿರುದ್ಧವೂ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದ್ದು, ಈ ದೊಡ್ಡ ಹಗರಣ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೂಡಲೇ ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿ ಬರುತ್ತಿದೆ.