ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ (ಕೆಎಫ್ಡಿ) ಹೆಚ್ಚುತ್ತಿರುವ ಕಾರಣ 8 ವರ್ಷದ ಬಾಲಕನು ಮೃತಪಟ್ಟಿದ್ದಾನೆ. ಈ ಘಟನೆಯಿಂದಾಗಿ ಜಿಲ್ಲಾಧಿಕಾರಿಗಳು ಸಾವು ಪರಿಶೀಲನೆಗೆ ಆದೇಶಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನಲ್ಲಿ ಈ ವರ್ಷ ಇಬ್ಬರು ಕೆಎಫ್ಡಿಗೆ ಬಲಿಯಾಗಿದ್ದಾರೆ. ಸದ್ಯ ಹೆಚ್ಚುತ್ತಿರುವ ಕೆಎಫ್ಡಿಗೆ ಕಾಡಿನ ಅಂಚಿನಲ್ಲಿ ವಾಸಿಸುವ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಶಿವಮೊಗ್ಗ, ಏಪ್ರಿಲ್ 19: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಮಂಗನ ಕಾಯಿಲೆಗೆ (KFD) 8 ವರ್ಷದ ಬಾಲಕ ಸಾವನ್ನಪ್ಪಿರುವಂತಹ (death) ಘಟನೆ ನಡೆದಿದೆ. ದತ್ತರಾಜಪುರ ಗ್ರಾಮದ ರಾಮು ಹಾಗೂ ಮಮತಾ ಎಂಬವರ ಮಗ ರಚಿತ್ ಮೃತ ಬಾಲಕ. ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬಾಲಕ ಸಾವನ್ನಪ್ಪಿದ್ದಾನೆ. ಆ ಮೂಲಕ ತೀರ್ಥಹಳ್ಳಿ ತಾಲೂಕಿನಲ್ಲಿ ಈ ವರ್ಷ ಮಂಗನ ಕಾಯಿಲೆಗೆ ಇಬ್ಬರು ಸಾವನ್ನಪ್ಪಿದ್ದಾರೆ.ಬಾಲಕ ಸಾವಿನ ಕುರಿತು ಒಂದು ವಾರದಲ್ಲಿ ಡೆತ್ ಅಡಿಟ್ ವರದಿ ನೀಡಲು ಶಿವಮೊಗ್ಗ ಡಿಸಿ ಗುರುದತ್ತ ಹೆಗಡೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಇನ್ನು ಬೇಸಿಗೆ ತಿಂಗಳಲ್ಲಿ ಮಂಗನ ಕಾಯಿಲೆ ಉಲ್ಬಣಗೊಳ್ಳುತ್ತಿದ್ದು, ಮಂಗನ ಕಾಯಿಲೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಪರದಾಡುತ್ತಿದ್ದಾರೆ. ಹೀಗಾಗಿ ಕಾಡಿನಂಚಿನಲ್ಲಿ ನೆಲಸಿರುವ ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ಆರೋಗ್ಯ ಅಧಿಕಾರಿಗಳ ಪ್ರಕಾರ ರಚಿತ್ ಅವರ ಸಹೋದರಿ ರಮ್ಯಾಗೆ ಏಪ್ರಿಲ್ 4 ರಂದು ಜ್ವರ ಬಂದಿತ್ತು. ಆಕೆಯನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ಮಾಡಿದ ಕೆಎಫ್ಡಿ ಪಾಸಿಟಿವ್ ದೃಢಪಟ್ಟಿತ್ತು. ಏಪ್ರಿಲ್ 5 ರಂದು, ರಚಿತ್ಗೆ ಆಯಾಸ ಮತ್ತು ವಾಂತಿ ಹಿನ್ನಲೆ ಅದೇ ಆಸ್ಪತ್ರೆಗೆ ದಾಖಲಿಸಲಾಯಿದೆ. ಆತನಿಗೆ ಕೆಎಫ್ಡಿ ಪಾಸಿಟಿವ್ ಬಂದಿದೆ. ರಚಿತ್ನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮಂಗನ ಕಾಯಿಲೆ ವಿಚಾರದಲ್ಲಿ ಭಾರಿ ನಿರಾಳತೆ ಕಂಡು ಕೊಂಡಿತ್ತು. ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ಈ ವರ್ಷ ಬೆರಳಣಿಕೆಯಷ್ಟು ಪ್ರಕರಣ ದಾಖಲಾಗಿದ್ದವು. ಜಿಲ್ಲೆಯ ಜನ ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.ರಾಜ್ಯದ ಅತಿದೊಡ್ಡ ಭೌಗೋಳಿಕ ಜಿಲ್ಲೆ ಆಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೆಕಡಾ 72 ಪ್ರತಿಶತಕ್ಕಿಂತ ಹೆಚ್ಚು ಕಾಡು ಪ್ರದೇಶ ಹೊಂದಿರುವ ಜಿಲ್ಲೆ ಆಗಿದೆ. ಈ ಜಿಲ್ಲೆಯಲ್ಲಿ ರಾಜ್ಯದ ಜನಸಂಖ್ಯೆಯ ಕೇವಲ 3 ಪ್ರತಿಶತ ಮಾತ್ರ ಜನ ಇಲ್ಲಿ ವಾಸಿಸುತ್ತಾರೆ. ಇಂತಹ ಸಮೃದ್ಧವಾದ ಜಿಲ್ಲೆಗೆ ಬಿಟ್ಟು ಬಿಡದೆ ಕಾಡಿದ್ದ ಮಂಗನಕಾಯಿಲೆ ಈ ವರ್ಷ ಹತೋಟಿಗೆ ತರುವಲ್ಲಿ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಯಶಸ್ಸು ಕಂಡಿದೆ.ಏಕೆಂದರೆ ಕಳೆದ ವರ್ಷದ ಮಾರ್ಚ್ ಅಂತ್ಯದವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 82 ಕೇಸ್ ಪತ್ತೆ ಆಗಿತ್ತು. ಆದರೆ ಈ ವರ್ಷದ ಮಾರ್ಚ್ ಅಂತ್ಯದವರೆಗೆ ಕೇವಲ ಮೂರು ಪ್ರಕರಣ ಪತ್ತೆ ಆಗಿದ್ದು, ಎಲ್ಲರೂ ಔಟ್ ಆಫ್ ಡೆಂಜರ್ ಎಂದು ಜಿಲ್ಲಾ ವೈದ್ಯಾಧಿಕಾರಿ ನೀರಜ್ ತಿಳಿಸಿದ್ದರು.