ಮೂರು ತಿಂಗಳ ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಪಘಾತ ಮಾಡಿ ಪರಾರಿಯಾಗಿದ್ದ ಲಾರಿ ಚಾಲಕನನ್ನು ಕಿತ್ತೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಸಂಭವಿಸಿದ ಬಳಿಕ 3 ತಿಂಗಳ ಕಾಲ ಪೊಲೀಸರ ನಡೆಸಿದ ತನಿಖೆ ರೋಚಕವಾಗಿದೆ. ಹಾಗಾದ್ರೆ, ಪೊಲೀಸರ ಬಲೆಗೆ ಲಾರಿ ಚಾಲಕ ಬಿದ್ದಿದ್ಹೇಗೆ? ಯಾರು ಆತ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಳಗಾವಿ, (ಏಪ್ರಿಲ್ 17): ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar ಕಾರು ಅಪಘಾತ ಪ್ರಕರಣಕ್ಕೆ (Car Accident Case) ಸಂಬಂಧಿಸಿದಂತೆ ಮೂರು ತಿಂಗಳು ಬಳಿಕ ಲಾರಿ ಚಾಲಕ ಸಿಕ್ಕಿಬಿದ್ದಿದ್ದಾನೆ. ಅಪಘಾತದ ಬಳಿಕ ಪರಾರಿಯಾಗಿದ್ದ ಲಾರಿ ಚಾಲಕನನ್ನು ಬಂಧಿಸುವಲ್ಲಿ ಬೆಳಗಾವಿಯ(Belagavi) ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ. ವಿವಿಧ ಆಯಾಮಗಳಲ್ಲಿ ಶೋಧ ನಡೆಸಿ ಕೊನೆಗೆ ಆರೋಪಿಯನ್ನ ತಡಕಾಡಿದ ಪೊಲೀಸರಿಗೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರನಲ್ಲಿ ಬಂಧಿಸಿದ್ದಾರೆ. ಈ ಮೊದಲು ಅಪಘಾತ ಎಸಗಿಲ್ಲ ಎಂದಿದ್ದ ಪುಣೆ ಮೂಲದ ಚಾಲಕ ಮಧುಕರ ಸೋಮವಂಶಿಯ ಫೋನ್ ಕಾಲ್ ಡಿಟೇಲ್ಸ್ ಆಧರಿಸಿ ಬಂಧನ ಮಾಡಲಾಗಿದೆ. ಆದ್ರೆ, ಆರೋಪಿಯನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ.
ಹಿಟ್ ಆ್ಯಂಡ್ ರನ್ ಕೇಸ್ನಲ್ಲಿ ಅಪಘಾತ ಎಸಗಿದ ಆರೋಪದಲ್ಲಿ ಲಾರಿ ಚಾಲಕನ ಬಂಧನ ಆಗಿದೆ. ಬಂಧಿತ ಆರೋಪಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ಗ್ರಾಮದ ಮಧುಕರ ಸೋಮವಂಶಿ ಎಂದು ಗೊತ್ತಾಗಿದೆ. ಇನ್ನು 3 ತಿಂಗಳ ಕಾಲ ಪೊಲೀಸರ ನಡೆಸಿದ ತನಿಖೆ ರೋಚಕ. ಮೊದಲು ಅಪಘಾತ ಎಸಗಿಲ್ಲ ಎಂದಿದ್ದ ಪುಣೆ ಮೂಲದ ಚಾಲಕ ಮಧುಕರ ಸೋಮವಂಶಿಯ ಫೋನ್ ಕಾಲ್ ಡಿಟೇಲ್ಸ್ ಆಧರಿಸಿ ಬಂಧನ ಮಾಡಲಾಗಿದೆ. ಅಪಘಾತ ಮಾಡಿದ್ದ ವಾಹನದ ಬಣ್ಣವನ್ನು ಎಫ್ಎಸ್ಎಲ್ಗೆ ರವಾನೆ ಮಾಡಲಾಗಿತ್ತು. ಆ ವರದಿಯಲ್ಲೂ ಅಪಘಾತ ನಡೆಸಿದ್ದು ಖಚಿತವಾಗಿದೆ.
ಜನವರಿ 14ರಂದು ಬೆಳಗಿನ ಜಾವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರಿಗೆ ಟಚ್ ಮಾಡಿ ಲಾರಿ ಸಮೇತ ಚಾಲಕ ಪರಾರಿ ಆಗಿದ್ದ. ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ಕಿತ್ತೂರಿನ ಅಂಬಡಗಟ್ಟಿ ಬಳಿ ಈ ಅಪಘಾತ ನಡೆದಿತ್ತು. ಕಾರು ಅಪಘಾತದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನಿಗೆ ಗಂಭೀರ ಗಾಯ ಸಹ ಆಗಿತ್ತು. ಬಳಿಕ ಕಿತ್ತೂರು ಠಾಣೆಯಲ್ಲಿ ಸಚಿವೆಯ ಕಾರು ಚಾಲಕ ಶಿವಪ್ರಸಾದ್, ದೂರು ದಾಖಲಿಸಿದ್ದ. ಈ ದೂರಿನ ಅನ್ವಯ ಪ್ರಕರಣದ ವಿಚಾರಣೆ ನಡೆಸಿದ್ದ ಕಿತ್ತೂರು ಠಾಣೆ ಪೊಲೀಸರು, ಹಿರೇಬಾಗೇವಾಡಿ ಟೋಲ್ ಬಳಿ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ್ದರು. ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಒಟ್ಟು 69 ಲಾರಿ ಚಾಲಕರನ್ನ ಪೊಲೀಸರು ವಿಚಾರಣೆ ನಡೆಸಿದ್ದರು. ಅಂತಿಮವಾಗಿ ಅಪಘಾತ ಮಾಡಿ ಎಸ್ಕೇಪ್ ಆಗಿದ್ದ ಲಾರಿ ಹಾಗೂ ಚಾಲಕನನ್ನು ಕಿತ್ತೂರು ಪೊಲೀಸರು ಮೂರು ತಿಂಗಳು ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಆರೋಪಿಗೆ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ.
ಇನ್ನು ಈ ಬಗ್ಗೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, 3 ತಿಂಗಳ ಹಿಂದೆ ಕಿತ್ತೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು ಈಗ ಆರೋಪಿ ಮಧುಕರ ಸೋಮವಂಶಿ ಬಂಧಿಸಿ ವಿಚಾರಣೆ ಮಾಡಿದ್ದೇವೆ. ಘಟನೆ ಸಂಬಂಧ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದೆವು. ಮೂರು ತಿಂಗಳ ಬಳಿಕ ಆರೋಪಿ ಮಧುಕರ್ ಬಂಧನವಾಗಿದೆ. ಪ್ರಕರಣ ಸಂಬಂಧ ಸುಮಾರು 69 ಲಾರಿ ಪರಿಶೀಲನೆ ಮಾಡಿದ್ದರು. 10 ವಾಹನಗಳ ಬಣ್ಣದ ಸ್ಯಾಂಪಲ್ ಪಡೆದು FSLಗೆ ಕಳುಹಿಸಿದ್ದೆವು. ವರದಿ ಬಂದ ಮೇಲೆ ಲಾರಿ ಯಾವುದು ಅಂತಾ ಪತ್ತೆ ಹಚ್ಚಿದ್ದೆವು. ವಿಚಾರಣೆ ವೇಳೆ ಆತ ಅಪಘಾತ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಶೀಘ್ರದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡುತ್ತೇವೆ. ಕಾನೂನು ಪ್ರಕಾರ ಬಂಧಿಸಿ ಠಾಣೆಯಲ್ಲಿ ಜಾಮೀನು ನೀಡಿ ಕಳಿಸಿದ್ದೇವೆ ಎಂದು ಮಾಹಿತಿ ನೀಡಿದರು.