ನೆಲಮಂಗಲ: ತಾಲೂಕಿನ ಕುಲುವನಹಳ್ಳಿ ಗ್ರಾಮದಲ್ಲಿನ ಹರಿಜನರ ಕಾಲೋನಿಯ ಮೂರು ಬೀದಿಗಳಲ್ಲಿ ಚರಂಡಿ ದುರಸ್ಥಿ ಕಾಮಗಾರಿ ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಹಾಗೂ ಅಧ್ಯಕ್ಷೆ ನಡುವಿನ ಹಗ್ಗಾಜಗ್ಗಾಟದಿಂದ ಕಾಮಗಾರಿ ಸ್ಥಗಿತವಾದ ಹಿನ್ನಲೆ ಗ್ರಾಮಸ್ಥರು ಕುಲುವನಹಳ್ಳಿ ಗ್ರಾ.ಪಂ.ಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.
ಕಾಲೋನಿಯ ನಿವಾಸಿ ಕೃಷ್ಣಪ್ಪ ಮಾತನಾಡಿ,ಕಳೆದ ಆರು ತಿಂಗಳ ಹಿಂದೆ ಕಾಮಗಾರಿ ಪ್ರಾರಂಭವಾಗಿ ಚರಂಡಿಗಳ ಗುಂಡಿ ತೆಗೆದು, ಅರ್ಧಕ್ಕೆ ಮೊಟಕು ಗೊಳಿಸಿದ ಹಿನ್ನಲೆ, ಇದೀಗ ಮೂರು ದಿನಗಳಿಂದ ಭಾರಿ ಮಳೆಯಿಂದ ಚರಂಡಿಗಳೇಲ್ಲಾ ನೀರು ಭರ್ತಿಯಾಗಿ, ಹರಿಜನ ಸಮುದಾಯದ ಸುಮಾರು ೫೦ ಮನೆಗಳು ಬೀಳುವ ಹಂತ ತಲುಪಿ, ಸಾಂಕ್ರಾಮಿಕ ರೋಗಗಳ ಆಗಾರವಾಗಿದೆ ಎಂದು ಸುಮಾರು ೧೦೦ ಕ್ಕೂ ಅಧಿಕ ಕಾಲೋನಿಯ ಜನರು ಪ್ರತಿಭಟಿಸಿದ್ದೇವೆ, ಜನಪ್ರತಿನಿಧಿಗಳ ನಡೆ ಮತ್ತು ಅಧಿಕಾರಿಗಳು ಬೇಜವಬ್ದಾರಿತನಕ್ಕೆ ಅಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು ಕೂಡಲೇ ನಮ್ಮ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.
ಮಾಜಿಗಳ ಹಗ್ಗಾಜಗ್ಗಾಟ: ಚರಂಡಿ ನಿರ್ಮಾಣಕ್ಕೆ ಪಂಚಾಯತಿಯಲ್ಲಿ ಕ್ರಿಯಾಯೋಜನೆ ತಯಾರಿಗಿದೆ, ಆದರೆ
ಗ್ರಾ.ಪಂ.ಮಾಜಿ ಉಪಾಧ್ಯಕ್ಷ ರಂಗನಾಥ್ ಮತ್ತು ಅಧ್ಯಕ್ಷೆ ಸುನಂದಮ್ಮ ನಡುವೆ ಹೊಂದಾಣಿಕೆ ಕೊರತೆ, ಪರಸ್ಪರ ಸಮನ್ವಯತೆಯಿಲ್ಲದೆ ಈ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ, ನೆಲಮಂಗಲ ಶಾಸಕರಾದ ಎನ್.ಶ್ರೀನಿವಾಸ್ ರವರಿಗೂ ನಾಲ್ಕು ಬಾರಿ ಮನವಿ ಸಲ್ಲಿಸಿದ್ದೇವೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಕಾಮಗಾರಿ ಕೈಗೆತ್ತುಗೊಳ್ಳಬೇಕು, ಮನೆಗಳಿಗೆ ನೀರು ಹೋಗುವುದನ್ನು ತಪ್ಪಿಸಿ ವಯೋವೃದ್ದರು ಮತ್ತು ಹಿರಿಯ ನಾಗರಿಕರು ಸಂಚರಿಸಲು ಅನುವು ಮಾಡಿಕೊಡಬೇಕು, ಮಾಜಿ ಜನಪ್ರತಿನಿಧಿಗಳು ತಮ್ಮ ಪ್ರತಿಷ್ಟೆ, ಕ್ಷುಲ್ಲಕ ಅಹಂ ಬಿಟ್ಟು ಅಭಿವೃದ್ಧಿಗೆ ಸ್ಪಂದಿಸಿ ಎಂದು ಗ್ರಾಮಸ್ಥೆ ಕಾವ್ಯ ತಿಳಿಸಿದರು.

ಪ್ರತಿಭಟನೆ: ಕುಲುವನಹಳ್ಳಿ ಗ್ರಾ.ಪಂ.ಮುಂದೆ ನೂರಾರು ಮಹಿಳೆಯರು ಸೇರಿ ಪ್ರತಿಭಟಿಸಿ, ಗ್ರಾಮದಲ್ಲೇಲ್ಲಾ ಅಭಿವೃದ್ಧಿ ನಾಮಫಲಕ ಅಳವಡಿಸುವ ಬದಲು ಕಾಮಗಾರಿ ಸಂಪೂರ್ಣಗೊಳಿಸಿ, ಪಿಡಿಓ ಮೋಹನ್ ಕುಮಾರ್ ಈಗಾಗಲೇ ಎರಡನೇ ಬಾರಿ ಮನವಿ ಸಲ್ಲಿಸಿದ್ದೇವೆ, ಗ್ರಾ.ಪಂ.ಅಧ್ಯಕ್ಷೆ ಕಾಮಗಾರಿ ಆರಂಭಿಸಿದ್ದಾರೆ ಎಂಬ ಒಂದೇ ಕಾಲಣಕ್ಕೆ ಮಾಜಿ ಉಪಾಧ್ಯಕ್ಷ ರಂಗನಾಥ್ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ ಎಂದು ರಾಕೇಶ್ ಅಕ್ರೋಶ ಹೊರಹಾಕಿದರು. ನಂತರ ಪಿಡಿಓ ಮೋಹನ್ ಕುಮಾರ್ ಮತ್ತು ಗ್ರಾ.ಪಂ.ಮಾಜಿ ಸದಸ್ಯ ರಂಗಸ್ವಾಮಯ್ಯ ಕಾಮಗಾರಿ ಪ್ರಾರಂಭಿಸುವ ಮುನ್ಸೂಚನೆ ನೀಡಿದ ಮೇಲೆ ಪ್ರತಿಭಟನೆಯನ್ನು ಬುಧವಾರದವರೆಗೆ ಮುಂದೂಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಸದಸ್ಯ ರಂಗಸ್ವಾಮಯ್ಯ, ಗ್ರಾಮಸ್ಥರಾದ ಯಶವಂತ್, ರಾಜೇಶ್, ರಂಗನಾಥ್, ನಂಜುಂಡಯ್ಯ, ಮೋಹನ್, ಮಹಿಳೆಯರಾದ ಪೂಜಮ್ಮ ತುಳಸಮ್ಮ, ಗಂಗಮ್ಮ, ಶೋಭಾ, ಸುಶೀಲಮ್ಮ, ಗಂಗಹನುಮಕ್ಕ, ಸೇರಿದಂತೆ ೫೦ ಕ್ಕೂ ಅಧಿಕ ಗ್ರಾಮಸ್ಥರು ಪ್ರತಿಭಟಿಸಿದರು.
